Monday 15 April 2013

ಕನ್ನಡ ಜನಪದಕ್ಕೆ ಮೊದಲ ನೇಗಿಲ ಹೂಡಿದ 'ಹಲಸಂಗಿ ಗೆಳೆಯರು.'



 ವಿಶೇಷ ಲೇಖನ

ಕನ್ನಡ ಜನಪದಕ್ಕೆ ಮೊದಲ ನೇಗಿಲು ಹೂಡಿದ ‘ಹಲಸಂಗಿ ಗೆಳೆಯರು

               
- ಡಾ.ಪ್ರಕಾಶ ಗ.ಖಾಡೆ

            ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿಯ ಗೆಳೆಯರು ಮೊದಲ ಬಾರಿಗೆ  ಜನಪದ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ, ಪ್ರಚಾರ ಮಾಡುವುದ ರೊಂದಿಗೆ ಕನ್ನಡ ಅಕ್ಷರಲೋಕದೊಳಗೆ ದೇಸೀಕಾವ್ಯಕ್ಕೆ ಉತ್ಕøಷ್ಟ ಸ್ಥಾನ ನೀಡಿದರು. ಕಳೆದ ಶತಮಾನದ ಮೂವತ್ತರ ದಶಕದ ಅರ್ಧಭಾಗವು ಜನಪದ ಸಾಹಿತ್ಯ ಸಂಗ್ರಹ ಕಾರ್ಯದ ಕ್ರಿಯಾಶೀಲ ವರ್ಷಗಳಾಗಿ ಕನ್ನಡ ಜನಪದ ಸಾಹಿತ್ಯ ಇತಿಹಾಸದಲ್ಲಿ ದಾಖಲಾದುದು. ಪ್ರತಿ ಎರಡು ವರ್ಷಕ್ಕೊಮ್ಮೆ ಒಂದರಂತೆ ಒಂದೊಂದು ವಿಶಿಷ್ಟ ಜನಪದ ಸಂಕಲನಗಳನ್ನು ಕೊಟ್ಟ ‘ಹಲಸಂಗಿ ಗೆಳೆಯರು’ ಮೊದಲ ಬಾರಿಗೆ ಕನ್ನಡ ದೇಸೀಕಾವ್ಯದ ಅಪೂರ್ವ ಪ್ರವೇಶವನ್ನು ಸಾರಿದರು. ಗರತಿಯ ಹಾಡು(1931), ಜೀವನ ಸಂಗೀತ(1933)ಗಳಂತೆ ‘ಮಲ್ಲಿಗೆ ದಂಡೆ’(1935) ಕೃತಿಯೂ ಜನಪದ ಗೀತ ಸಂಕಲನವಾಗಿ ಕನ್ನಡ ಜನಪದ ಸಾಹಿತ್ಯಕ್ಕೆ ತನ್ನ ಅಪರೂಪದ ಕೊಡುಗೆ ನೀಡಿತು. ಈ ಬಗೆಯ ಕಾರ್ಯದಲ್ಲಿ ಲಾವಣಿಕಾರರ, ಗರತಿಯರ ಹಾಡುಗಳಿಗೆ ಪ್ರಭಾವಿತರಾಗಿದ್ದ ಮಧುರಚೆನ್ನ, ಪಿ.ಧೂಲಾ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣನವರು ಮಾಡಿದ ಸಾಧನೆ ಅಪೂರ್ವವಾದುದು. ಹಲಸಂಗಿ, ಚಡಚಣ, ಇಂಡಿ ಮೊದಲಾದ ಪ್ರದೇಶಗಳಲ್ಲಿ  ಜನಪ್ರಿಯವಾಗಿದ್ದ ಈ ಹಾಡುಗಳ ಬಗ್ಗೆ 1923ರಲ್ಲಿ ವಿಜಾಪುರದಲ್ಲಿ ನಡೆದ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ ಈ ಹಾಡುಗಳ ಖ್ಯಾತಿಯನ್ನು ಸಾರಿದರು
    ಡಾ.ಗುರುಲಿಂಗ ಕಾಪಸೆಯವರು ‘ಹಲಸಂಗಿ  ಹಾಡು’(2000) ಪ್ರಸ್ತಾವನೆಯಲ್ಲಿ ಹಲಸಂಗಿ ಭಾಗದ ಲಾವಣಿಕಾರರು ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡ ಬಗ್ಗೆ ಹೀಗೆ ಬರೆಯುತ್ತಾರೆ. “ಹಲಸಂಗಿಯ ಸುಪ್ರಸಿದ್ದ ಲಾವಣಿಕಾರನಾಗಿದ್ದ ಖಾಜಾಭಾಯಿ ತೀರಿಕೊಂಡ ಮೇಲೆ, ಅವನ ಲಾವಣಿಗಳು ಇನ್ನೂ ಸ್ವಾರಸ್ಯಕರವಾಗಿ ಹಾಡಲ್ಪಡುತ್ತಿದ್ದವು. ಖಾಜಾಭಾಯಿ ತೀರಿಕೊಂಡದ್ದು 1924ರಲ್ಲಿ. ಜೀವನ ಸಂಗೀತದಲ್ಲಿ ಸಂಗ್ರಹಿತವಾದ ಲಾವಣಿಗಳು ಮೂಲ ಕವಿಗಳಿಂದಲೇ ಪಡೆದವುಗಳಲ್ಲ. ಆಗಿನ ಕಾಲದ ಬೇರೆ ಬೇರೆ ಹಾಡುಗಾರರಿಂದ ದೊರಕಿಸಿದಂತಹವು. ಸಂಗ್ರಹಕಾರರು ತಿಳಿಸಿರುವಂತೆ ಲಾವಣಿಕಾರ ಕುಬ್ಬಣ್ಣನವರ ಮಕ್ಕಳಾದ ವೀರಭದ್ರಪ್ಪನವರು, ವಿಶೇಷವಾಗಿ ಹಲಸಂಗಿಯವರೇ ಆದ ಓಲೇಕಾರ ರಾಮಚಂದ್ರಪ್ಪನವರು ಲಾವಣಿಗಳನ್ನು ಹೇಳಿಕೊಟ್ಟಿದ್ದಾರೆ. ಓಲೇಕಾರ ರಾಮಚಂದ್ರಪ್ಪನವರು ಆ ಕಾಲದ ಸುಪ್ರಸಿದ್ದ ಹಾಡುಗಾರರು. ಈತನ ಕಂಚಿನ ಕಂಠ ಎಂಥವರನ್ನು ಆಕರ್ಷಿಸುತ್ತಿತ್ತು, ಬೆರಗುಗೊಳಿಸುತ್ತಲಿತ್ತು. 1936ರಲ್ಲಿ ರಾಮಕೃಷ್ಣ ಪರಮಹಂಸರ ಜನ್ಮ ಶತಮಾನೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹಲಸಂಗಿಗೆ ಆಗಮಿಸಿದ್ದ ಶಿವರಾಮ ಕಾರಂತರು ಓಲೇಕಾರ ರಾಮಚಂದ್ರನಿಂದ ಲಾವಣಿಗಳನ್ನು ಕೇಳಿ ತಮ್ಮನ್ನು ತಾವೇ ಮರೆತರು. ಅಷ್ಟೇ ಅಲ್ಲ ಆತನನ್ನು ತಮ್ಮ ಪುತ್ತೂರಿಗೂ ಕರಿಸಿ, ಹಾಡಿಸಿ, ಕೇಳಿ ಸಂತೋಷಪಟ್ಟರು. ಈ ವಿಷಯವನ್ನು ಕಾರಂತರೇ ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ರಾಮಚಂದ್ರನ ಲಾವಣಿಗಳನ್ನು ಕೇಳಲು ಆ ದಿನ ಕಲೆತ ಹಿಂದೂ ಮುಸಲ್ಮಾನರ ಒಕ್ಕೂಟವು ನನ್ನ ಸ್ಮರಣೆಯಲ್ಲಿ ಬಹಳ ಕಾಲ ಇತ್ತು. ನಾನು ಮುಂದೊಮ್ಮೆ ಅವನನ್ನು ನಮ್ಮ ಊರಿಗೂ ಕರೆಯಿಸಿಕೊಂಡು ಹಾಡಿಸಿ ಕೇಳಿದ್ದೆ. ಒಮ್ಮೆ ಅವನಿಂದ ನಮ್ಮ ಶಾಲೆಯ ಹುಡುಗರಿಗೂ ಲಾವಣಿಗಳನ್ನು ಕಲಿಸುವ ಏರ್ಪಾಡು ಮಾಡಿದ್ದೆ. ಇದು ಅಂದಿನ ಹಲಸಂಗಿ ಲಾವಣಿ ಹಾಡುಗಾರನ ಅಗ್ಗಳಿಕೆಯನ್ನು ಸೂಚಿಸುತ್ತದೆ. ಓಲೇಕಾರ ರಾಮಚಂದ್ರನಂತೆ ಓಲೇಕಾರ ಮಾದಣ್ಣನೂ ಲಾವಣಿಗಳನ್ನು ಸೊಗಸಾಗಿ ಹಾಡುತ್ತಿದ್ದನು. ಮಧುರಚೆನ್ನರ ಆತ್ಮೀಯ ಗೆಳೆಯನಾದ ಈತನಿಂದ ಆ ಮುಂದಿನ ತಲೆಮಾರಿನವರು ಲಾವಣಿಗಳನ್ನು ಕೇಳಿ ಸಂತೋಷಪಟ್ಟಿದ್ದಾರೆ. ಹಲಸಂಗಿಯ ಗಾಢ ಸಂಬಂಧ ಹೊಂದಿದ್ದ ವರಕವಿ ದ.ರಾ.ಬೇಂದ್ರೆಯವರ ‘ಸಚ್ಚಿದಾನಂದ’ ದಂಥ ಕವಿತೆಗಳು ಲಾವಣಿಯ ಲಯವನ್ನು ಅಳವಡಿಸಿಕೊಂಡಿದ್ದನ್ನು ಗಮನಿಸಬಹುದು.”
   
ಮಧುರ ಚೆನ್ನ
ಹಲಸಂಗಿ ಗೆಳೆಯರು ಕೈಗೊಂಡ ಆ ಸಂದರ್ಭದ ಜಾನಪದ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯ ಜನಮುಖಿ ಸಾಹಿತ್ಯಕ್ಕೆ ಒಂದು ಬಗೆಯಲ್ಲಿ ವ್ಯಾಪಕತೆ ತಂದಿತು. ಮೊದಲ ಬಾರಿಗೆ ಜಾನ್ ಫೇತ್‍ವುಲ್ ಪಿs್ಲೀಟರ್ ಸಂಗ್ರಹಿಸಿದ್ದ ಆಯ್ದ ಲಾವಣಿಗಳು ‘ಇಂಡಿಯನ್ ಎಂಟಿಕ್ವೆರಿ’ 1885-1888ರಲ್ಲಿ ಪ್ರಕಟವಾಗಿದ್ದವು. ಆದರೆ ಇವುಗಳಿಗೆ ಕನ್ನಡದಲ್ಲಿ ವ್ಯಾಪಕತೆ  ತಂದುಕೊಟ್ಟ ಸಾಧನೆ ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ. ಪಿ.ಧೂಲಾ ಸಾಹೇಬ ಮತ್ತು ಸಿಂಪಿ ಲಿಂಗಣ್ಣನವರ ‘ಜೀವನ ಸಂಗೀತ’ ಲಾವಣಿಗಳ ಮೊದಲ ಸಂಗ್ರಹವಾಗಿದೆ.  1919ರಲ್ಲಿ ಜರುಗಿದ 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹನುಮಂತಗೌಡರು ‘ಲಾವಣಿಗಳು’ ಎಂಬ ವಿಷಯವಾಗಿ ಒಂದು ಲೇಖನ ಓದಿ ‘ಹೈದರಾಬಾದಿನ ಲಾವಣಿ ಪದ’ ಎಂಬ ನಾಲ್ಕು ಪುಟಗಳ ಲಾವಣಿ ಕೊಟ್ಟಿದ್ದಾರೆ. ಅನಂತರ 1923ರಲ್ಲಿ ವಿಜಾಪುರದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಲೇಖನವನ್ನೋದಿದ ಮಧುರಚೆನ್ನರು ಆ ಲೇಖನದಲ್ಲಿ ಒಂದು ಲಾವಣಿಯನ್ನೇ ಉದಾಹರಿಸಿದ್ದಾರೆ. ಅದೇ ಸಮ್ಮೇಳನದಲ್ಲಿ ಪಿ.ಧೂಲಾ ಸಾಹೇಬರು ‘ಲಾವಣಿಯ  ಲಾವಣ್ಯ’ ಎಂಬ ಲೇಖನವನ್ನೋದಿದ್ದುದು ಒಂದು ಉಲ್ಲೇಖನೀಯ ಅಂಶವಾಗಿದೆ. 1925ರಲ್ಲಿ ಮಾಸ್ತಿಯವರು ‘ಕನ್ನಡ ಲಾವಣಿ ಸಾಹಿತ್ಯ’ ಎಂಬ ಲೇಖನವನ್ನು ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಬರೆದರು. ಹೀಗೆ ‘ಲಾವಣಿ’ಗಳ ವಿಷಯಕ್ಕೆ ಆಸಕ್ತಿ ಹುಟ್ಟಿಸುವ ಕಾರ್ಯವೇನೋ ನಡೆಯಿತು. ಆದರೆ ಯಾರೂ ಒಂದು ಸಂಗ್ರಹವನ್ನು ಕೊಡುವ ಸಾಹಸ ಮಾತ್ರ ಮಾಡಲಿಲ್ಲ. ಅದನ್ನು ಮೊಟ್ಟಮೊದಲಿಗೆ ಮಾಡಿದವರೆಂದರೆ ಹಲಸಂಗಿ ಗೆಳೆಯರು. ಈ ಮೂಲಕ ಕನ್ನಡ ನವೋದಯ ಕಾವ್ಯದ ಆರಂಭಕ್ಕೆ ಹಲಸಂಗಿ ಕೇಂದ್ರದಿಂದ ನಡೆದ ಈ ಕೆಲಸ ಕನ್ನಡದ ಹೊಸಕಾವ್ಯವನ್ನು ರೂಪಿಸುವಲ್ಲಿ ಎಲ್ಲ ಬಗೆಯ ಅವಕಾಶಗಳನ್ನು ಸಜ್ಜು ಮಾಡಿಕೊಟ್ಟಿತು.
 ಗರತಿಯ ಹಾಡು :
   ಕನ್ನಡ ಜನಪದ ಗೀತ ಸಂಕಲನ ಮೊಟ್ಟಮೊದಲ ಕೃತಿಯಾದ ‘ಗರತಿಯ ಹಾಡು’,ಇದರಂಥದು ಇನ್ನೊಂದಿಲ್ಲವೆನ್ನುವಷ್ಟು ಅದ್ವಿತೀಯವಾದುದು. ಇದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉಂಟುಮಾಡಿದ ತೀವ್ರತರವಾದ ಸೆಳೆತ ದಾಖಲಾರ್ಹವಾದುದು. ಹಲಸಂಗಿ, ಚಡಚಣ, ಸಾಲೋಟಗಿ, ಇಂಡಿ ಮೊದಲಾದ ಈ ಪರಿಸರದ ಹಳ್ಳಿಗಳಲ್ಲಿ ಜನಪದ ಹಾಡುಗಳನ್ನು ದಣಿವಿಲ್ಲದೆ ಹಾಡುವ ಹೆಣ್ಣು ಮಕ್ಕಳನ್ನು ಮುಂದೆ ಕುಳ್ಳಿರಿಸಿಕೊಂಡು ಹಲಸಂಗಿ ಗೆಳೆಯರು ಹಾಡಿಸಿ ಬರೆದುಕೊಂಡರು. ಹೀಗೆ ರೂಪಿತವಾದುದೇ ‘ಗರತಿಯ ಹಾಡು.’ ಇದರ ಸಂಗ್ರಾಹಕರು ಹಲಸಂಗಿಯ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮೊದಲಾದ ಗೆಳೆಯರು. ಅಂದರೆ ಮಧುರಚೆನ್ನ, ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ ಅವರು.
        ‘ಗರತಿಯ ಹಾಡು’ ಸಂಗ್ರಹದಲ್ಲಿರುವ ಸುಮಾರು 800 ತ್ರಿಪದಿಗಳು ಜನಪದ ತಾಯಂದಿರ ಕಲ್ಪಿತ ಶಕ್ತಿಗೆ, ಅನುಭವಕ್ಕೆ, ಬದುಕಿನ ವಿವಿಧ ಬಗೆಯ ಸಂದರ್ಭಗಳಿಗೆ ಹಿಡಿದ ಕನ್ನಡಿಗಳಾಗಿವೆ. ವಿಜಾಪುರ ಜಿಲ್ಲೆಯ ಭಾಷಿಕ ಸೊಗಡು ಇಲ್ಲಿ ಹೆಪುŒಗಟ್ಟಿದೆ. ಇಲ್ಲಿಯ ಹಾಡುಗಳನ್ನು ಅವುಗಳ ವಿಷಯ ವಸ್ತುಗಳ ಹಿನ್ನೆಲೆಯಲ್ಲಿ ವರ್ಗೀಕರಿಸಿಕೊಟ್ಟಿದ್ದಾರೆ. ಪರಂಪರೆ, ಸ್ತುತಿ, ತವರುಮನೆ ತಾಯ್ತಂದೆ, ಅಣ್ತಮ್ಮರೂ ಅಕ್ಕತಂಗಿಯರೂ ಅತ್ತಿಗೆ ನಾದಿನಿಯರೂ, ಗೆಳತಿ, ಅತ್ತೆಯ ಮನೆಯ ಕಷ್ಟ, ಮನಸ್ತಾಪ, ಸತಿಪತಿ ಇತ್ಯಾದಿ ಶೀರ್ಷಿಕೆಗಳಲ್ಲಿ ಸರಿಜೋಡಿಸಿ ಇಂಥ ಸಂಗ್ರಹಗಳ ವಿಧಾನವನ್ನು ತಾವೇ ರೂಪಿಸಿ ಮುಂದಿನ ಸಂಗ್ರಾಹಕರಿಗೆ ಮಾರ್ಗ ತೋರಿಸಿದ್ದಾರೆ.  ಬಿ.ಎಂ.ಶ್ರೀ., ಬೇಂದ್ರೆ ಮತ್ತು ಮಾಸ್ತಿ ಅವರು ಈ ಪ್ರತಿಷ್ಠಿತ ಜನಪದ ಗೀತ ಸಂಕಲನಕ್ಕೆ ಮೌಲಿಕವಾದ ಪ್ರಸ್ತಾವನೆ, ಪರಿಚಯ, ಮುನ್ನುಡಿ ಬರೆದು ತೂಕ ಹೆಚ್ಚಿಸಿದ್ದಾರೆ. ಅದುವರೆಗಿನ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯ ಕುರಿತು, ವ್ಯಕ್ತವಾಗಿದ್ದ ಹೀಗಳಿಕೆಯ ಮಾತುಗಳನ್ನು ಮೊಟ್ಟಮೊದಲಬಾರಿಗೆ ‘ಇಕ್ಕಿ ಮೆಟ್ಟಿದ’ ಬಿ.ಎಂ.ಶ್ರೀ ಅವರು ‘ಮೊದಲು ಹುಟ್ಟಿದುದು ಜನವಾಣಿ, ಅದು ಬೆಳೆದು ಪರಿಷ್ಕøತವಾಗಿ ವೃದ್ದಿಯಾದುದು ಕವಿವಾಣಿ. ಜನವಾಣಿ ಬೇರು: ಕವಿವಾಣಿ ಹೂವು’ ಎಂದು ಸಾರಿದರು.ಹಾಡುತ್ತ, ಕಲಿಯುತ್ತ ಮುಂದಿನ ಪೀಳಿಗೆಗೆ ಬೆಳೆದು ಉಳಿದುಕೊಂಡು ಬಂದ ಈ ಪದಗಳು ಜನಸಾಮಾನ್ಯರ ನಾಲಗೆಯ ಮೇಲೆ ನಲಿದಾಡುವ ಭಾರತೀಯ ಸಂಸ್ಕøತಿಯ ಪರಂಪರೆಯ ಕಿಡಿನುಡಿಗಳಾಗಿವೆ.
ಬ್ಯಾಸಗಿ ದಿವಸಕ ಬೇವಿನ ಮರತಂಪ
ತವರ ಮನಿಯಾ ದೀಪ ತವರೇರಿ ನೋಡೇನ
ನಾರಿ ಕಣ್ಣಿನ ನೀರ ಬಾರಿ ಬೀಜಿನ್ಹಾಂಗ
ಗೆಳೆತನ ಕೂಡಿದರ ಗೆಜ್ಜಿ ಜೋಡಿಸಿದ್ಹಾಂಗ
ಅರಸ ಒಳ್ಳೆವರಂತ ವಿರಸವಾಡಲಿಬ್ಯಾಡ
ತೊಟ್ಟೀಲದಾಗೊಂದು ತೊಳದ ಮುತ್ತನು ಕಂಡೆ
ತಾಯಿದ್ರ ತವರ್ಹೆಚ್ಚು ತಂದಿದ್ರ ಬಳಗ್ಹೆಚ್ಚು
ಎಲ್ಲ್ಯಾರೆ ಇರಲೆವ್ವಾ ಹುಲ್ಲಾಗಿ ಬೆಳೆಯಲಿ
ಕಣ್ಣು ಮೂಗಿಲೆ ನನ್ನ ಹೆಣ್ಣು ಮಗಳು ಚೆಲುವಿ...
     ಹೀಗೆ ಪ್ರತಿ ತ್ರಿಪದಿಯಲ್ಲಿ ಕಂಡುಬರುವ ಸಾಲುಗಳು ಜನಪದರ ಸಾಹಿತ್ಯಿಕ ಭಾಷೆಯ ಶ್ರೇಷ್ಠತೆಯನ್ನು ಸಾರುತ್ತವೆ. ಸರಳ, ಲಲಿತ, ಹಿತಮಿತವಾದ ನುಡಿಗಳು ಎಂಥ ಸಹೃದಯದವರನ್ನಾದರೂ ಸೆಳೆದುಕೊಳ್ಳುತ್ತವೆ. ಇಂಥ ನುಡಿ ಸಾಲುಗಳು ಮೌಖಿಕ ಕಾವ್ಯ ಶ್ರೀಮಂತಿಕೆಯಿಂದ ಕೂಡಿ ಹಾಡಿದವರ ಜೊತೆಗೇನೆ ಮರೆಯಾಗಿ ಹೋಗುತ್ತಿರುವ ಸಂದರ್ಭದಲ್ಲಿ ಇವನ್ನು ಸಂಗ್ರಹಿಸಿ ಸಂಪಾದಿಸಿಕೊಡುವ ಮೂಲಕ ‘ಹಲಸಂಗಿ ಗೆಳೆಯರು’ ಕನ್ನಡ ನಾಡಿನ ಜಾನಪದದ ಹೆಬ್ಬಾಗಿಲು ತೆರೆದುದು ಒಂದು ಐತಿಹಾಸಿಕ ಸತ್ಯವಾಗಿದೆ. ಜನಪದ ತಾಯಂದಿರು ಕೊಡುವ ಪ್ರತಿಮೆ, ಪ್ರತೀಕಗಳಿಗೆ ಎಂಥ ಶಿಷ್ಟಕವಿಯನ್ನಾದರೂ ತೀವ್ರತರವಾಗಿ ಸೆಳೆಯುವಂಥದು.
ಮಗಳು ಎಂಥಾ ಚೆಲುವಿ ನಕ್ಕರೆ ತುಟಿಗೆಂಪು
ಅಳಿಯ ಎಂಥವರು ನನಗ್ಹೇಳ | ಹಂಪೀಯ
ವಿರುಪಾಕ್ಷಿಗಿಂತ ಚೆಲುವರು.
    ಜನಪದ ಕವಿಯತ್ರಿಯರ ಹೋಲಿಕೆ, ಹಂಬಲಗಳು ತಾವು ಆರಾದಿsಸುವ ದೇವನನ್ನು ಜೊತೆ ಸೇರಿಸಿ ಕಲ್ಪಿಸುವುದು ವಿಶಿಷ್ಟವಾದುದು. ದ.ರಾ.ಬೇಂದ್ರೆಯವರು ಈ ಸಂಕಲನದ ‘ಪರಿಚಯ’ದಲ್ಲಿ ಜನಪದ ಹಾಡುಗಾರ್ತಿಯರ ಪದ ಶ್ರೇಷ್ಠತೆಯನ್ನು ಹೀಗೆ ಸಾರಿದ್ದಾರೆ. “ಜೀವನವೇ ದೇವತೆಯಾದ, ತ್ರಿಪದಿ ಛಂದದಲ್ಲಿ ಹೊರಹೊಮ್ಮಿದ ‘ಗರತಿಯ ಹಾಡಿ’ನ ಋಷಿಗಳು ಹೆಣ್ಣು ಮಕ್ಕಳು-ನಮ್ಮ ತಾಯಿ ತಂಗಿಯರು, ಅಮ್ಮ ಅಕ್ಕಂದಿರು, ಮಡದಿ ಮಕ್ಕಳು. ಹಾಗೆ ವಿಚಾರಿಸಿ ನೋಡಿದರೆ ಅವರದೇ ನಿಜವಾದ ಕಾವ್ಯ, ಉಳಿದದು ಕಾವ್ಯದ ಛಾಯೆ”  ಎಂಬಲ್ಲಿ ಬೇಂದ್ರೆಯವರು ಈ ಕೃತಿಯ ಮಹತ್ತು ಸಾರಿದ್ದು ಸ್ಪಷ್ಟ ವಾಗುತ್ತದೆ.
     ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡು ಬಂದ ‘ಗರತಿಯ ಹಾಡು’ ಉದ್ದಕ್ಕೂ ತನ್ನ ಶ್ರೇಷ್ಠತೆಯನ್ನು ಕಾಯ್ದುಕೊಂಡು ಬಂದಿದೆ. ‘ಈ ಗ್ರಂಥ ಕನ್ನಡದ ಗರತಿಯರ ಬಾಳಿನ ಅಮೃತ ಬಿಂದುಗಳನ್ನೇ ಸಂಕಲನ ಮಾಡಿದಂತಿರುವ ರೀತಿಯಲ್ಲಿ ದಿವ್ಯ ಮಾಧುರ್ಯವನ್ನು ನೀಡುತ್ತದೆ’ ಎಂದು ಜಾನಪದ ವಿದ್ವಾಂಸ ಎಲ್.ಆರ್.ಹೆಗಡೆ ಅವರು ಗುರುತಿಸಿದರೆ, ಗರತಿಯ ಹಾಡು ಕನ್ನಡದ ಪ್ರಪ್ರಥಮ ಜಾನಪದ ಕಾವ್ಯ ಸಂಕಲನವಾಗಿದ್ದು ಗುಣದ ದೃಷ್ಟಿಯಿಂದ ಕೂಡ ಇಂದಿಗೂ  ಅದ್ವಿತೀಯ ಕೃತಿಯಾಗಿ ನಿಂತಿದೆ ಎಂದಿದ್ದಾರೆ ಹಿರಿಯ ವಿದ್ವಾಂಸರಾದ ಸಿ.ಪಿ.ಕೆ.ಅವರು. ಗುರುಲಿಂಗ ಕಾಪಸೆ ಅವರು ‘ಕನ್ನಡ ಜನಪದ ಸಾಹಿತ್ಯದ ಆದ್ಯ ಸಂಗ್ರಹವಾದ ಇದು ಅದ್ವೀತಿಯವಾದ ಸಂಗ್ರಹವೂ ಅಹುದು’ ಎಂದು ಅದರ ವಿಶೇಷತೆಯನ್ನು ಬಣ್ಣಿಸಿದ್ದಾರೆ. ಕೃತಿಗೆ ಆಶೀರ್ವಾದ ರೂಪದಲ್ಲಿ ಬರೆದ ಬರಹದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಮಾತನ್ನು ಗಮನಿಸಬೇಕು. ಈ ಕೃತಿ ಮುಂದೆ ಕಾವ್ಯ ಕಟ್ಟುವ ಕವಿಗಳಿಗೆ ಮಾರ್ಗದರ್ಶಿಯಾಗಿರಲೆಂದು ಅವರು ಹೇಳಿದ್ದು ಈ ಪದಗಳು ನಮ್ಮ ಜನರೆಲ್ಲರ ಆದರವನ್ನು ಪಡೆಯಲೆಂದೂ ಇವುಗಳಿಂದ ಸಾಧ್ಯವಾದ ಎಲ್ಲ ಪ್ರಯೋಜನ ವನ್ನೂ ನಮ್ಮ ಸಾಹಿತ್ಯ ಸೇವಕರೂ ಹೊಂದಲೆಂದೂ ನಾನು ಹಾರೈಸುತ್ತೇನೆ ಎನ್ನುವಲ್ಲಿ ನವೋದಯದ ಪ್ರಾರಂಭದ ಕಾಲಕ್ಕೆ ಬರೆಯುತ್ತಿದ್ದ ಕವಿಗಳಿಗೆ ಈ ಕೃತಿ ಸ್ಪೂರ್ತಿ ನೀಡುವ ಸುಳಿವನ್ನು ಪ್ರಕಟಪಡಿಸಿದ್ದಾರೆ. ಈ ಹಾರೈಕೆ ನಿಜವೂ  ಆಗಿದೆ.
                                                                        ಜಿ.ಬಿ.ಖಾಡೆ
       ‘ಗರತಿಯ ಹಾಡು’ ಗ್ರಾಮೀಣರ ಆಸರಿಕೆ ಬ್ಯಾಸರಿಕೆ, ಪ್ರೀತಿ ಪ್ರೇಮ, ಸರಸ ವಿರಸ, ಮಮತೆ ಬಾಂಧವ್ಯ ಹೀಗೆ ನಿತ್ಯ ಬದುಕಿನ ಸಮಗ್ರ ಭಾವಗಳ ಅಬಿsವ್ಯಕ್ತಿಯಾಗಿ ಕನ್ನಡ ಕಾವ್ಯವನ್ನು ಜನಮುಖಿಯಾಗಿ ಸಾರ್ವತ್ರಿಕಗೊಳಿಸಿತು. ಉತ್ತರ ಕರ್ನಾಟಕದ ವಿಶೇಷವಾಗಿ ತದ್ದೇವಾಡ ಪ್ರಾಂತದ ಆಡುಮಾತಿನ ಬಂಧ. ಬಳುಕುಗಳನ್ನು ಹೊತ್ತು ಹುಟ್ಟಿರುವ ಈ ತ್ರಿಪದಿಗಳಿಗೆ ಸರಿಮಿಗಿಲೆನ್ನಿಸುವ ಜನಪದ ಗೀತ ಸಂಗ್ರಹಗಳು ಕನ್ನಡದಲ್ಲಿ ಬಹಳ ಇಲ್ಲ ಎಂಬುದು ‘ಗರತಿಯ ಹಾಡು’ ಕೃತಿಯ ಹೆಗ್ಗಳಿಕೆ ಸಾರುತ್ತದೆ. ಮುಂದೆ ಇದೇ ಭಾಗದಲ್ಲಿ ಹಲಸಂಗಿ ಗೆಳೆಯರ ತರುವಾಯ ತ್ರಿಪದಿ ಸಂಕಲನಗಳು ಮೂಡಿ ಬಂದವು. ಅವುಗಳಲ್ಲಿ ಈಶ್ವರಚಂದ್ರ ಚಿಂತಾಮಣಿ ಅವರ ‘ಗರತಿಯರ ಮನೆಯಿಂದ’ ಹಾಗೂ ಜಿ.ಬಿ.ಖಾಡೆ ಅವರ ‘ಕಾಡು ಹೂಗಳು’ ಸಂಕಲನಗಳು ಹೆಚ್ಚು ಜನಪ್ರಿಯವಾದವು. ಹಲಸಂಗಿ ಗೆಳೆಯರ ಮತ್ತು ಚಿಂತಾಮಣಿ ಅವರ ತರುವಾಯ ಅಖಂಡ ವಿಜಾಪುರ ಜಿಲ್ಲೆಯ ಜನಪದ ಗೀತ ಸಾಹಿತ್ಯ ಸಂಗ್ರಹ, ಸಂಪಾದನಾ ಕಾರ್ಯದಲ್ಲಿ ತೊದಲಬಾಗಿ(ಜಮಖಂಡಿ)ಯ ಜಿ.ಬಿ.ಖಾಡೆ ಅವರು 1965ರಲ್ಲಿ  ಬಹುದೊಡ್ಡ ಕೆಲಸ ಮಾಡಿದರು. ಅವರು ಹಳ್ಳಿ ಹಳ್ಳಿ ಸುತ್ತಿ ಸಂಗ್ರಹಿಸಿದ ಬೀಸುವ ಕಲ್ಲಿನ, ಕೋಲಾಟದ ಹಾಗೂ ಹಂತಿ ಪದಗಳನ್ನು ಒಳಗೊಂಡ ತ್ರಿಪದಿ ಸಂಕಲನವು ‘ಕಾಡು ಹೂಗಳು’ ಹೆಸರಿನಲ್ಲಿ ಮೈಸೂರು ವಿಶ್ವವಿದ್ಯಾಲಯವು 1973ರಲ್ಲಿ ಪ್ರಕಟಿಸಿತು. ಮುಂದೆ ರಿವಾಯತ ಪದಗಳ ಸಂಕಲನ ‘ಹಳ್ಳಿ ಹಬ್ಬಿಸಿದ ಹೂಬಳ್ಳಿ’ ಹಾಗೂ ಡೊಳ್ಳಿನ ಮೇಳದವರು ಹೇಳಿದ 23 ಜನಪದ ಕಥೆಗಳ ‘ಬೆಳವಲ ಬೆಳಕು’ ಕೃತಿಗಳು 1981ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿತು. ಹಲಸಂಗಿ ಗೆಳೆಯರ ಪರಂಪರೆಯು ಈ ಭಾಗದಲ್ಲಿ ಜಿ.ಬಿ.ಖಾಡೆ ಅವರಿಂದ ಮುಂದುವರೆಯಿತು.
ಜೀವನ ಸಂಗೀತ :
        ಹಲಸಂಗಿ ಗೆಳೆಯರು ಮೊದಲ ಬಾರಿಗೆ ಲಾವಣಿ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ, ಪ್ರಚಾರ ಮಾಡುವುದರೊಂದಿಗೆ ಕನ್ನಡ ಅಕ್ಷರಲೋಕದೊಳಗೆ ದೇಸೀಕಾವ್ಯಕ್ಕೆ ಉತ್ಕøಷ್ಟ ಸ್ಥಾನ ನೀಡಿದರು..      ಹಲಸಂಗಿ ಗೆಳೆಯರು ಕೈಗೊಂಡ ಆ ಸಂದರ್ಭದ ಜಾನಪದ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯ ಜನಮುಖಿ ಸಾಹಿತ್ಯಕ್ಕೆ ಒಂದು ಬಗೆಯಲ್ಲಿ ವ್ಯಾಪಕತೆ ತಂದಿತು. ಮೊದಲ ಬಾರಿಗೆ ಜಾನ್ ಫೇತ್‍ವುಲ್ ಪಿs್ಲೀಟರ್ ಸಂಗ್ರಹಿಸಿದ್ದ ಆಯ್ದ ಲಾವಣಿಗಳು ‘ಇಂಡಿಯನ್ ಎಂಟಿಕ್ವೆರಿ’ 1885-1888ರಲ್ಲಿ ಪ್ರಕಟವಾಗಿದ್ದವು. ಆದರೆ ಇವುಗಳಿಗೆ ಕನ್ನಡದಲ್ಲಿ ವ್ಯಾಪಕತೆ  ತಂದುಕೊಟ್ಟ ಸಾಧನೆ ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ. ಪಿ.ಧೂಲಾ ಸಾಹೇಬ ಮತ್ತು ಸಿಂಪಿ ಲಿಂಗಣ್ಣನವರ ‘ಜೀವನ ಸಂಗೀತ’ ಲಾವಣಿಗಳ ಮೊದಲ ಸಂಗ್ರಹವಾಗಿದೆ. ‘ಜೀವನ ಸಂಗೀತ’ ಕೃತಿಯು ಹಲವು ನೆಲೆಗಳಲ್ಲಿ ಕನ್ನಡ ಕಾವ್ಯವನ್ನು ಚೇತನಗೊಳಿಸಿತು. ಮುಖ್ಯವಾಗಿ ಲಾವಣಿ ಕವಿಯ ಖಾಜಾಭಾಯಿಯನ್ನು ಮತ್ತು ಆತನ ಶೃಂಗಾರ ಕಾವ್ಯದ ರಸಪೂರ್ಣತೆಯನ್ನು ಕನ್ನಡ ಓದುಗರಿಗೆ ಕೊಟ್ಟಿತು. ಆಧುನಿಕ ಕನ್ನಡ ಕಾವ್ಯದಲ್ಲಿ ಕೆ.ಎಸ್.ನರಸಿಂಹಸ್ವಾಮಿಯವರ ದಾಂಪತ್ಯ ಗೀತೆಗಳ ‘ಮೈಸೂರು ಮಲ್ಲಿಗೆ’ ಕನ್ನಡ ಸಹೃದಯರನ್ನು ಪ್ರಭಾವಿಸಿಕೊಂಡಂತೆ, ಕನ್ನಡ ನವೋದಯದ ಆರಂಭಕಾಲದಲ್ಲಿ ಖಾಜಾಭಾಯಿಯ ಶೃಂಗಾರ ಲಾವಣಿಗಳಿಂದ ‘ಜೀವನ ಸಂಗೀತ’ ಹೆಸರಾಯಿತು. ಸಂಗ್ರಹದ ಪರಿಚಯದಲ್ಲಿ ‘ಏಳು ಮಂದಿ ಲಾವಣಿಕಾರರ ಮಿಗಿಲಾದ ಹನ್ನೆರಡು ಲಾವಣಿಗಳನ್ನು ನಾಡಿಗರ ಇದಿರಿಗೆ ಇಟ್ಟಿದ್ದೇವೆ. ಅಲ್ಲದೆ ಎರಡು ಚಿಕ್ಕ ಲಾವಣಿಗಳುಂಟು. ಅವುಗಳನ್ನು ಇಡೀ ಸಂಗ್ರಹದ ಮೊದಲೊಂದು ಕೊನೆಗೊಂದು ಸೇರಿಸಿ ದ್ದೇವೆ.’ ಎಂದಿದ್ದಾರೆ ಸಂಗ್ರಹಕಾರರು. ಇಲ್ಲಿ ಹಲಸಂಗಿಯ ಲಾವಣಿಕಾರ ಖಾಜಾಭಾಯಿಯ ಲಾವಣಿಗಳೇ ಹೆಚ್ಚಾಗಿದ್ದು, ಅವೆಲ್ಲ ಅತ್ಯಂತ ಮನೋಜ್ಞವಾಗಿವೆ. ಅಲ್ಲದೆ ಕುಬ್ಬಣ್ಣ, ಸಂಗಣ್ಣ, ನಾನಾ ಸಾಹೇಬ, ನ್ಯಾಮಣ್ಣ, ಶಿವಲಿಂಗ, ಗೋಪಾಳ ದುರದುಂಡಿ, ಸಿದ್ದೂ-ಶಿವಲಿಂಗ ಇವರ ರಚನೆಗಳಿವೆ. ಆ ಕಾಲದ ಕಾವ್ಯದ ನೀರಸ ಬಗೆಯನ್ನು ಸಂಗ್ರಹಕಾರರು ಕೃತಿಯ ಪರಿಚಯದಲ್ಲಿ ಹೇಳುತ್ತ ಕನ್ನಡ ಕಾವ್ಯಕ್ಕೆ ಜೀವಂತಿಕೆಯನ್ನು ತುಂಬುವ ಈ ಲಾವಣಿಗಳನ್ನು ನಾವು ಸಂಗ್ರಹಿಸಬೇಕಾಯಿತು ಎನ್ನುತ್ತಾರೆ.
       ‘ಶೃಂಗಾರ’ ಪ್ರಧಾನವಾದ ‘ಜೀವನ ಸಂಗೀತ’ ಲಾವಣಿ ಕೃತಿ ಕನ್ನಡ ಕಾವ್ಯಕ್ಷೇತ್ರಕ್ಕೆ ದೇಸೀಯತೆಯ ಹೊಸಸ್ಪರ್ಶ ನೀಡಿತು. ಇಲ್ಲಿಯ ಅಸಲಜಾತ ಹೆಣ್ಣು, ಸಂಪಿಗಿ ತೆನಿಯಂಥ ಹುಡುಗ, ವತ್ಸಲಾಪಹರಣ, ಚಂದ್ರಣಿ, ಕೃಷ್ಣಲೀಲೆ, ಗಿಡ್ಡಪೆÇೀರಿ ಈ ಕವಿತೆಗಳೆಲ್ಲ ಶೃಂಗಾರವನ್ನು ಒಂದು ರಸಗಟ್ಟಿಯಾಗಿ ಮಾಡಿಕೊಂಡಿವೆ. ಹಾಗೆಯೇ ‘ಜೀವನ ಸಂಗೀತ’ದಲ್ಲಿ ಶೃಂಗಾರದೊಂದಿಗೆ ಹಾಸ್ಯರಸವು ಜೊತೆಯಾಗಿಯೇ ಬಂದಿದೆ.    
        ಒಟ್ಟಾರೆ ‘ಜೀವನ ಸಂಗೀತ’ವು ಕನ್ನಡ ಲಾವಣಿ ಸಾಹಿತ್ಯದ ಒಂದು ಬಹುಮುಖ್ಯವಾದ ಕೃತಿಯಾಗಿ ಹೊರಹೊಮ್ಮುವುದರೊಂದಿಗೆ ಆ ಕಾಲಕ್ಕೆ ಅಡಿಯಿಟ್ಟ ಕನ್ನಡ ನವೋದಯಕ್ಕೆ ಮೊದಲ ಪಂಕ್ತಿಯ ಸಾಧಕ ಕೃತಿ ಎನಿಸಿತು. ಇಲ್ಲಿಯ ಎಲ್ಲ ಲಾವಣಿಗಳಲ್ಲಿನ ಕಲ್ಪನಾಶಕ್ತಿ, ಭಾವ ಸಂಪತ್ತು, ಲಯ ಪ್ರಾಸಗಳ ಗತ್ತು ಗಮ್ಮತ್ತು ನಮ್ಮ ಕವಿಗಳನ್ನು ಆಕರ್ಷಿಸಿತು. ಆ ಕಾಲಕ್ಕೆ ರೂಪಿತವಾದ ‘ಭಾವಗೀತ’ ಪ್ರಕಾರಕ್ಕೆ ಸರಿದೊರೆಯಾಗಿ ನಿಂತು ಲಾವಣಿಗಳು ತಮ್ಮ ಅಸ್ತಿತ್ವ ಪ್ರಕಟಿಸಿದವು.
 ಮಲ್ಲಿಗೆ ದಂಡೆ :
      ಹೆಣ್ಣು ಮಕ್ಕಳ ಹಾಡು ಸಂಗ್ರಹವಾದ ‘ಮಲ್ಲಿಗೆ ದಂಡೆ’ ಕೃತಿಯನ್ನು ಕಾಪಸೆ ರೇವಪ್ಪನವರು ಸಂಪಾದಿಸಿಕೊಟ್ಟರು.ಗ್ರಾಮೀಣರ ಜನಜೀವನದ ಮೇಲೆ ಹಾಡು ಹಾಸು ಹೊಕ್ಕಾಗಿರುವುದನ್ನು ‘ಮಲ್ಲಿಗೆ ದಂಡೆ’ಯ ಹಾಡುಗಳು ನಿರೂಪಿಸಿವೆ. ಇಲ್ಲಿ ಜನಪದರ ಆಚರಣೆಗಳ ವಿಶಿಷ್ಟ ಹೆಣಿಕೆ ಇದೆ. ಸ್ತುತಿಪದ, ಪ್ರಣಯ, ಭಾವಗೀತೆ, ಕಥೆಯ ಹಾಡು, ಮದುವೆಯ ಹಾಡು, ಸೋಬಾನದ ಹಾಡು, ಹಾಸ್ಯದ ಹಾಡು ಮುಂತಾದ ಸಾಂದಬಿರ್sಕ ಹಾಡುಗಳು ಇಲ್ಲಿ ಸಂಗ್ರಹಿಸಲಾಗಿದೆ. ಜನಪದರು ನಿತ್ಯ ಹೊಸತಾಗುವ, ಹೊಸತನಕ್ಕಾಗಿ ತೆರೆದುಕೊಳ್ಳುವ  ವಿಶಿಷ್ಟತೆಗೆ ಸಾಕ್ಷಿಯಾಗಿ ಅವರ ಹಾಡುಗಳು ಮತ್ತು ಹಾಡೊಳಗಿನ ವಸ್ತು ಸಂಗತಿಗಳು ಪ್ರಧಾನವಾಗುತ್ತವೆ. ‘ರೇವಪ್ಪನವರ ಸಾಹಿತ್ಯಿಕ ಕಾರ್ಯಗಳಲ್ಲಿ ಚಿರಸ್ಮರಣೀಯವಾದದ್ದು ಮಲ್ಲಿಗೆ ದಂಡೆ, ರೇವಪ್ಪನವರ ಈ ಪರಿಶ್ರಮವು ಕನ್ನಡ ಸಾರಸ್ವತ ಪ್ರಪಂಚ ಎಂದೂ ಮರೆಯದಂತಹದು.’ ಮಧುರಚೆನ್ನರು ಈ ಕೃತಿಯ ಮುನ್ನುಡಿಯಲ್ಲಿ ಕೃತಿಯ ಮೌಲ್ಯವನ್ನು ಪ್ರಕಟಪಡಿಸಿದ್ದಾರೆ. ಅಲ್ಲದೆ ಆಧುನಿಕ ಕನ್ನಡ  ಕಾವ್ಯ ಕಟ್ಟುವ ಮಾಲೆಗಾರರಿಗೆ ಇಲ್ಲಿ ಹೂವ ತಂದು ಇಟ್ಟ ಬಗ್ಗೆ ಅವರು ಹೀಗೆ ಬರೆಯುತ್ತಾರೆ. ‘ವರಕವಿಗಳು ಉದಯಿಸುವ ಮುಂಚೆ ನಮ್ಮಂಥ ನರಕವಿಗಳ ಜಂಗುಳಿಯೇಳುವುದು ಅನಿವಾರ್ಯ. ಇವರ ಕಾವ್ಯಶಕ್ತಿಯು ಸಾಗುವಳಿಯಿಂದ ಬೆಳೆಯಬೇಕಾದದ್ದು. ಇವರ ಸಸಿಗೆ ಹೊರಗಿನ ನೀರೂ ಹವೆಯೂ ಕಾಲಕಾಲಕ್ಕೆ ಒದಗಬೇಕು. ಈ ದೃಷ್ಟಿಯಿಂದ ಸಂಗ್ರಹಿಸಿದ ಪ್ರಸ್ತುತ ಗೀತ ಗುಚ್ಫವು ನವ್ಯ ಕಾವ್ಯಕುಮಾರಿಯ ಕಳೆಯನ್ನು ಹೆಚ್ಚಿಸುವುದಕ್ಕೆಂದು ಅವಳಿಗೆ ಕಟ್ಟಿದ ‘ಮಲ್ಲಿಗೆ ದಂಡೆ’ಯಾಗಿದೆ ಎಂದಿದ್ದಾರೆ.
     ‘ಮಲ್ಲಿಗೆ ದಂಡೆ’ ಕೃತಿಗೆ ವಿಶಿಷ್ಟತೆ ಪ್ರಾಪ್ತವಾಗಿರುವುದು ಇಲ್ಲಿನ ಜನಪದರ ಮನೆ ಮನೆಗಳಲ್ಲಿ ಆಚರಣೆಗಳನ್ನು ಕಟ್ಟಿಕೊಡುವಲ್ಲಿ. ಭಟಗಿ ಹಾಡು, ಒಳಕಲ್ಲ ಪೂಜೆ ಹಾಡು, ಅರಿಷಿಣ ಹಚ್ಚೋ ಹಾಡು, ಐರಾಣಿಯ ಹಾಡು,  ಸಂಡಿಗಿ ಕಡಿಯುವ ಹಾಡು, ನೂಲು ಸುತ್ತುವ ಹಾಡು, ಅಡಿಕೆ ಆಡುವ ಹಾಡು, ಭೂಮದ ಹಾಡು, ಬೀಗರ ಹಾಡು, ಕೂಸು ಒಪ್ಪಿಸುವ ಹಾಡು ಮೊದಲಾದವು ಮದುವೆ ಸಂದರ್ಭವನ್ನು ಕಟ್ಟಿಕೊಟ್ಟರೆ, ಮನಸ ಜೈನರ ಮಡದಿ, ಹಿಂಬಳಿ ಮುಂಬಳಿ, ರನ್ನದುಡುಗಣಿ, ಬಾಲಿ ತಾ ಮೈನೆರದು, ಹಣಿಯಂಬೊ ಭಾಂವಕ, ಹಸು ಮಗಳS ನೀಲಮ್ಮ ಹಾಡುಗಳು ಸೋಬಾನೆ ಪದಗಳಾಗಿವೆ. ಅಲ್ಲದೆ ಕುಬಸಾ ಮಾಡೊ ಹಾಡು, ಬಯಕೆಯ ಹಾಡು, ಉಡಿ ತುಂಬುವ ಹಾಡು, ಬೇನೆ ತಿನ್ನುವ ಹಾಡು, ತೊಟ್ಟಿಲಲ್ಲಿ ಹಾಕುವ ಹಾಡು ಮುಂತಾದ ವಿಶಿಷ್ಟ ಸಂದರ್ಭದ ಹಾಡುಗಳು ಇಲ್ಲಿವೆ. ಮದುವೆ ಮೊದಲಾದ ಸಂದರ್ಭಗಳಲ್ಲಿ ಜರುಗುವ ಹಾಸ್ಯದ ಪ್ರಸಂಗದ ಹಾಡುಗಳೂ ಇಲ್ಲಿವೆ. ಈ ಎಲ್ಲಾ ಹಾಡುಗಳ ಕೊನೆಯಲ್ಲಿ ಪ್ರತಿ ಹಾಡಿನ ಅರ್ಥ, ಸಂದರ್ಭ ಮತ್ತು ಪ್ರಾದೇಶೀಕ ಪದಗಳ ಅರ್ಥ ಹಾಗೂ ಛಂದಸ್ಸು ವಿವರಿಸಲಾಗಿದೆ. ಹೀಗಾಗಿ ‘ಮಲ್ಲಿಗೆ ದಂಡೆ’ ಸಂಕಲನವು ಜನಪದ ಗೀತ ಸಂಗ್ರಾಹಕರಿಗೆ ಒಂದು ಮಾದರಿ ಎನಿಸಿದೆ.
ಮದುವೆ, ಸೋಬಾನೆಗಳಲ್ಲಿ ಹೆಣ್ಣು ಮಕ್ಕಳ ಹೆರಳ ತುಂಬ ‘ಮಲ್ಲಿಗೆ ದಂಡೆ’ಯದೇ ಘಮಘಮಿಪ ಶೃಂಗಾರ. ಈ ಶೀರ್ಷಿಕೆಯ ಸಾರ್ಥಕತೆ ಎಂಬಂತೆ ಇಲ್ಲಿನ ಒಂದೊಂದು ಹಾಡೂ ‘ಮಲ್ಲಿಗೆ ದಂಡೆ’ಯ ಸುವಾಸನೆಯನ್ನೂ, ಮೋಹಕತೆಯನ್ನು ಒಟ್ಟಿಗೆ ನೀಡುತ್ತದೆ.
ಎಳ್ಳ ಹಚ್ಚಿದ ರೊಟ್ಟಿ ಎಣ್ಣಿ ಬದನಿಕಾಯಿ
ಮಸರ ಕಲಸಿದ ಬುತ್ತಿ ಬಿಸಿಯ ಬಾನ
ಅಲ್ಲ, ಮಾಗುಣಿ ಬೇರ, ಬೆಲ್ಲ, ಬೆಳವಲದ್ಹಣ್ಣ|
ಮನ ಬೇಡಿ ನನ ಜೀವ ಬಗಸ್ಯಾದ ತಾಯಿ |
ಬಂಕಿ ಕಾಡತಾವ
ಬಸುರಿದ್ದ ಹೆಣ್ಣು ಬಯಸುವ ಈ ತಿನಿಸುಗಳು ಬೆಳವಲನಾಡಿನ ವಿಶಿಷ್ಟ ಆಹಾರ ಕ್ರಮವನ್ನು ಸಾರುತ್ತವೆ ಮತ್ತು ಅವರ ಆರೋಗ್ಯಕ್ಕೆ ಬೇಕಾದ ಆಹಾರದ ಮತ್ತು ವಿಶ್ರಾಂತಿಯ ಅರಿವನ್ನು ಒಟ್ಟಿಗೆ ನೀಡುತ್ತವೆ. ‘ಗ್ರಾಮೀಣ ಭಾವ ಸಂಪತ್ತಿಗೆ ಈ ಹಾಡುಗಳು ಒಳ್ಳೆಯ ನಿದರ್ಶನಗಳಾಗಿವೆ.’ ಒಟ್ಟಾರೆ ಗುರುಲಿಂಗ ಕಾಪಸೆ ಅವರು ಗುರುತಿಸಿರುವಂತೆ ‘ಮಲ್ಲಿಗೆ ದಂಡೆ’ ಒಟ್ಟು ಸಂಗ್ರಹವೇ ಜನಪದ ಹಾಡುಗಳ ಪರಿಮಳ ಸೂಸುವ ಒಂದು ಅಪೂರ್ವ ಸಂಗ್ರಹ. ರೇವಪ್ಪನವರು ತೆಗೆದುಕೊಂಡ ಪರಿಶ್ರಮ, ಸಂಪಾದನಾ ಕಾರ್ಯದಲ್ಲಿ ತೋರಿದ ಶ್ರದ್ಧೆ, ಆಯ್ಕೆಯಲ್ಲಿ ತೋರಿಸಿಕೊಟ್ಟ ಔಚಿತ್ಯ ಪ್ರe್ಞÉ ಮುಂತಾದವುಗಳೆಲ್ಲ ಶ್ಲಾಘನೀಯವಾದವು.
        ಹಲಸಂಗಿ ಗೆಳೆಯರ ಜನಪದ ಕಾರ್ಯವೇ ಒಂದು ಮಾದರಿಯದು. ಆ ಗೆಳೆಯರಲ್ಲೊಬ್ಬರಾದ ಕಾಪಸೆ ರೇವಪ್ಪನವರ ಈ ಕಾರ್ಯ ಇನ್ನೂ ವಿಶೇಷವಾದುದು. ಈ ಸಂಗ್ರಹಕ್ಕೆ ಬರೆದ ಮಧುರಚೆನ್ನರ ಟಿಪ್ಪಣಿಗಳು ಕೂಡ ಅಭ್ಯಾಸ ಪೂರ್ಣವಾಗಿದ್ದು ಜನಪದ ಸಾಹಿತ್ಯ ಸಂಗ್ರಹ ಮಾಡುವವರಿಗೆ ಮಾರ್ಗದರ್ಶಕವಾಗಿವೆ. ಜೊತೆಗೆ ಹೊಸಕಾವ್ಯ ರಚನಾಕಾರರಿಗೆ ಅಪರೂಪದ ಮಾದರಿಯಾಗಿ ಗುರುತಿಸಿಕೊಂಡಿದೆ. ‘ಮಲ್ಲಿಗೆ ದಂಡೆ’ಯ ಹಾಡುಗಳಲ್ಲಂತೂ ಛಂದೋವೈವಿಧ್ಯ ಅಚ್ಚರಿಗೊಳಿಸುವಂತಿದೆ. ತ್ರಿಪದಿಯ ಹಲವಾರು ರೂಪ ಭೇದಗಳ ಜೊತೆಗೆ ರಗಳೆ ಸಾಂಗತ್ಯಗಳನ್ನು ಹೋಲುವ ಹಾಗೂ ದ್ವಿಪದಿ, ಚೌಪದಿ ಭೋಗ ಷಟ್ಪದಿಯಂಥ ಶಿಷ್ಟ ಕಾವ್ಯಕ್ಕೆ ಸೇರಿದ ಅನೇಕ ಛಂದೋ ರೂಪಗಳ ಬಳಕೆ ಇಲ್ಲಿ ಕಂಡುಬರುತ್ತದೆ. ಇದು ಯಾವುದನ್ನೂ ಜನಪದ ಕವಿಗಳು ಅಭ್ಯಾಸ ಮಾಡದೇ ಬರೆದರೆಂದು ಭಾವಿಸುವುದು ಒಟ್ಟಿನಲ್ಲಿ ಕಾವ್ಯ ರಚನೆಯ ತತ್ವಕ್ಕೇ ವಿರುದ್ಧವಾಗಿದೆ. ಹೀಗೆ ಸಹಜವಾಗಿ ಬರುವ ಜನಪದ ಗೀತೆಗಳು ಸಾಹಿತ್ಯಿಕ ಅಂಶವನ್ನು ಪ್ರಧಾನವಾಗಿ ಹೊಂದಿರುವುದು ಅವುಗಳ ಶ್ರೇಷ್ಠತೆಯನ್ನು ಗುರುತಿಸುವಂತೆ ಮಾಡುತ್ತದೆ. ‘ಹಳ್ಳಿಗರ ಹಾಡುಗಳು ಎಷ್ಟು ಮನೋಹರವಾಗಿರಬಲ್ಲವು ಅವುಗಳನ್ನು ಕಟ್ಟಿದವರೆಲ್ಲ ವ್ಯುತ್ಪತ್ತಿಯುಳ್ಳವರೆಂದಾಗಲಿ, ಸತತವಾಗಿ ಅಭ್ಯಾಸ ಮಾಡಿದವರೆಂದಾಗಲಿ ಯಾರು ಹೇಳಬಲ್ಲರು? ಎಂಬ ಅಬಿsಪ್ರಾಯಕ್ಕೆ ಬರುವ ತೀನಂಶ್ರೀ ಅವರು ಜನಪದರ ಕಾವ್ಯದ ಹುಟ್ಟಿನ ಸಹಜತೆಯನ್ನು ತೋರುತ್ತಾರೆ. ಒಟ್ಟಾರೆ ಹಲಸಂಗಿ ಗೆಳೆಯರ ಬಳಗದ ಕವಿಗಳು ಜನಪದ ಗೀತೆಗಳ ಸಂಗ್ರಹ ಸಂಪಾದನೆಯಲ್ಲಿ ತೋರಿದ ಕಾಳಜಿಯಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯದ ಸಮೃದ್ಧತೆಗೆ ಸಾಕ್ಷಿಯಾಯಿತು.
=======================================================================

                                                              ವಿಳಾಸ :
ಡಾ.ಪ್ರಕಾಶ ಗ.ಖಾಡೆ,ಶ್ರೀ ಗುರು,ಸರಸ್ವತಿ ಬಡಾವಣೆ,ಸೆಕ್ಟರ್ ನಂ.63,ನವನಗರ,ಬಾಗಲಕೋಟ.  ಮೊ. 9845500890

1 comment:

  1. U have written sathi pathi poem right can u give that explanation of that plz

    ReplyDelete